27 March 2009

ಹೊಸ ವರ್ಷದ ಶುಭಾಶಯಗಳು


ನಿಮಗೂ, ನಿಮ್ಮ ಕುಟುಂಬದವರಿಗೂ, ನಿಮ್ಮ ಸ್ನೇಹಿತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ವಿರೋಧಿ ಸಂವತ್ಸರವು ನಿಮಗೆ ಶುಭಕರವಾಗಲಿ, ಸುಖ-ಸಮೃದ್ಧಿಗಳಿಂದ ಕೂಡಿರಲಿ.
ಸರ್ವಧಾರಿ ಸಂವತ್ಸರದ ಅನುಭವಗಳು ಹೊಸ ವರ್ಷದ ಸಾಧನೆಗಳಿಗೆ ಅಡಿಪಾಯವಾಗಲಿ.
ನೀವು ಅಂದುಕೊಂಡಿದ್ದನ್ನು ಸಾಧಿಸುವವರಾಗಿ.
ನೆಮ್ಮದಿಯ ಸುಖಮಯ ಬಾಳು ನಿಮ್ಮದಾಗಲಿ.


ಇಂದು ಚೈತ್ರ ಶುದ್ಧ ಪಾಡ್ಯ. ಹಿಂದುಗಳಿಗೆ ಇದು ಚಾಂದ್ರಮಾನ ಯುಗಾದಿ. ಚಾಂದ್ರಮಾನ ಅಂದ್ರೆ ಚಂದ್ರನ ಚಲನೆಯನ್ನು ಮಾನವಾಗಿಟ್ಟುಕೊಂಡು ತಿಥಿ/ತಿಂಗಳು/ವರ್ಷಗಳನ್ನು ಲೆಕ್ಕಾಚಾರ ಹಾಕುವುದು. ಸೂರ್ಯೋದಯದಿಂದ ದಿನದ, ಪಾಡ್ಯ(ಅಮಾವಾಸ್ಯೆಯ ಮರುದಿನ)ದಿಂದ ತಿಂಗಳ, ಯುಗಾದಿಯಿಂದ ವರ್ಷದ ಆರಂಭ. ಆ ಪ್ರಕಾರವೇ ನಾವು ನಾಗರಪಂಚಮಿ, ಗಣೇಶ ಚೌತಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ದಸರಾ, ದೀಪಾವಳಿ ಯಾವತ್ತು ಬರುತ್ತೆ ಅಂತ ಲೆಕ್ಕಾಚಾರ ಹಾಕೋದು ಮತ್ತು ಆಚರಿಸೋದು. ಅದರಂತೆ ಇದು ಹೊಸ ವರ್ಷದ ಮೊದಲ ದಿನ.

ಯುಗಾದಿ ದಿನ ಬೇವು-ಬೆಲ್ಲ ತಿನ್ನುವ ಪರಿಪಾಠವೂ ಇದೆ. ಜೀವನದಲ್ಲೂ ಕಷ್ಟ-ಸುಖಗಳು ಬೇವು-ಬೆಲ್ಲದಂತೆ ಕಹಿ ಮತ್ತು ಸಿಹಿ.
ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಅನ್ನೋದನ್ನು ಇದು ತಿಳಿಸಿಕೊಡುತ್ತದೆ.

ಗಣೇಶ ಚೌತಿಯಂದು ರಾತ್ರಿ ಚಂದ್ರ ದರ್ಶನ ಮಾಡಿದ್ರೆ ಅಪವಾದ ಬರುತ್ತೆ ಅನ್ತಾರೆ. ಮಹಾಭಾರತದಲ್ಲಿ ಶ್ರೀ ಕೃಷ್ಣ ಚೌತಿಯಂದು ಚಂದ್ರನನ್ನು ನೋಡಿದ್ದರಿಂದಾಗಿ ಶಮಂತಕ ಮಣಿಯನ್ನು ಕದ್ದ ಆಪಾದನೆ ಬಂದಿತ್ತು. ಆದರೆ ಯುಗಾದಿಯಂದು ಚಂದ್ರನನ್ನು ನೋಡಿದರೆ ಶುಭವಾಗುತ್ತದಂತೆ. ಆದ್ದರಿಂದ ಸಂಜೆ ಹೊತ್ತು ಎಲ್ಲರೂ ಆಗಸದ ಕಡೆ ನೋಡುತ್ತಿರುತ್ತಾರೆ.

ನಾವು ೭ನೇ ತರಗತಿಯಲ್ಲಿ ಕಲಿತು ಕಂಠಸ್ಥ ಮಾಡಿದ್ದ, ಅಂಬಿಕಾತನಯದತ್ತ ನಾಮಾಂಕಿತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ "ಯುಗಾದಿ" ಕವನವನ್ನು ಎಲ್ಲರೂ ಇಂದು ನೆನೆಸಿಕೊಳ್ಳುತ್ತಾರೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೇ ಏತಕೋ

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗದೇಕೊ ಬಾರದು
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೋ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನ್ನಷ್ಟೇ ಮರೆತಿದೆ

ಇಂದಿನಿಂದ ವಸಂತ ಋತು. ಎಲ್ಲಾ ಮರ-ಗಿಡಗಳು ಈ ಋತುವಿನಲ್ಲಿ ಚಿಗುರುತ್ತವೆ. ಹಾಗೇ ಮಾವಿನಮರ ಕೂಡಾ. ಅದರ ಚಿಗುರನ್ನು ತಿಂದು ಕೋಗಿಲೆ ಇಂಪಾಗಿ ಹಾಡುತ್ತದೆ ಅಂತ ಕವಿಗಳು ಬಣ್ಣಿಸುತ್ತಾರೆ. ಎಲ್ಲರಿಗೂ ವರ್ಷಕ್ಕೊಂದು ಹೊಸ ಜನ್ಮ ಸಿಗುತ್ತದೆ, ಆದರೆ ಆ ಭಾಗ್ಯ ನಮಗ್ಯಾಕಿಲ್ಲ, ಮಲಗಿದಾಗ ಮರಣ ಎದ್ದಾಗ ಹೊಸ ಜನ್ಮ ನಮಗೆ ಯಾಕೆ ಬರಲ್ಲ ಅಂತ ಬೇಂದ್ರೆಯವರು ಸೃಷ್ಟಿಕರ್ತನಲ್ಲಿ ಕೇಳುತ್ತಾರೆ.


|| ನವಂ ವರ್ಷಂ ಶುಭಂ ವಿದಧಾತು ||
Wish You a Very Happy & Prosperous New Year

1 comment:

  1. ಶಿವಾನ೦ದ್,
    ನಿಮಗೂ ಕೂಡಾ ಹೊಸ ವರುಷದ ಶುಭಾಶಯಗಳು.

    ReplyDelete