22 March 2009

ಸಂಚಾರ ದಟ್ಟಣೆಗೆ ಏನು ಪರಿಹಾರ ?

ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಸಂಖ್ಯೆಗಳಿಂದಾಗಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ವಾಯು ಹಾಗೂ ಶಬ್ದ ಮಲಿನಗೊಳ್ಳುತ್ತಿದೆ. ಅಪಘಾತಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಏನು ಪರಿಹಾರ ? ರಸ್ತೆ ಅಗಲೀಕರಣ ಹಾಗೂ ಮೇಲು ಸೇತುವೆಗಳು ಸಮಸ್ಯೆಯನ್ನು ಪರಿಹರಿಸೋದಿಲ್ಲ. ೪-೫ ತಿಂಗಳಲ್ಲಿ ವಾಹನಗಳ ಸಂಖ್ಯೆ ಅಷ್ಟೆ ಏರುತ್ತದೆ. ಹಾಗಿದ್ದರೆ ಏನು ಮಾಡಬಹುದು ?

ನಾನು ಹೀಗೇ ಕುಳಿತು ಯೋಚನೆ ಮಾಡುತ್ತಿರಬೇಕಾದರೆ, ಕೆಲವು ವಿಚಾರಗಳು ನನ್ನ ಮನಸ್ಸಿಗೆ ತೋಚಿದವು.

ಹೊಸ ಉದ್ಯಮ/ಕಂಪನಿ ಯಾವುದೇ ಇರಲಿ ಬೆಂಗಳೂರು ಬಿಟ್ಟು ಮೈಸೂರು, ಮಂಗಳೂರು, ದಾವಣೆಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ತುಮಕೂರು ಬೇರೆ ಬೇರೆ ಕಡೆ ಸ್ಥಾಪನೆಯಾಗಲಿ. ಅಲ್ಲಿ ಕೂಡ ರಸ್ತೆ, ನೀರು, ವಿದ್ಯುತ್ ಹಾಗೂ ಇನ್ನಿತರ ಸೌಕರ್ಯಗಳು ಅಭಿವೃದ್ಧಿಯಾಗಲಿ. ಆವಾಗ ಜನರು/ವಾಹನಗಳು ಬೇರೆ ಬೇರೆ ನಗರಗಳಲ್ಲಿ ಹಂಚಿ ಹೋಗುತ್ತಾರೆ. ಏರುತ್ತಿರುವ ಮನೆ/ಸೈಟ್ ಬೆಲೆಗಳಿಗೂ ಸ್ವಲ್ಪ ಕಡಿವಾಣ ಬೀಳಬಹುದು. ಈ ಕೆಲಸ ಮುಂಚೆನೇ ಆಗಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತು ಇದನ್ನು ಜಾರಿಗೊಳಿಸಬಹುದು.

ಬೆಂಗಳೂರು ನಗರದಲ್ಲಿ ಈವಾಗಲೇ ಜನ/ವಾಹನ ದಟ್ಟಣೆ ಇರುವ ಬಡಾವಣೆಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಹೊಸ ಕಂಪನಿಯ ಬಹುಮಹಡಿ ಕಟ್ಟಡಗಳು, ವಸತಿ ಸಮುಚ್ಚಯಗಳನ್ನು ಕಟ್ಟಲು ಅನುಮತಿ ಕೊಡಬಾರದು. ಬೆಂಗಳೂರಿನ ಹೊರವಲಯಗಳಲ್ಲಿ ಇಂತಹ ಕಟ್ಟಡಗಳನ್ನು ಕಟ್ಟಲಿ. ನಗರ ಅಗಲವಾಗಿ ಬೆಳೆಯಲಿ, ಎತ್ತರಕ್ಕೆ ಬೇಡ.

ಸುಭಾಶ್ ನಗರ, ಶಿವಾಜಿನಗರ, ಶಾಂತಿನಗರ, ಕೃ. ರಾ. ಮಾರುಕಟ್ಟೆ, ಮೈಸೂರು ರಸ್ತೆಗಳಲ್ಲಿ ಈಗ ಇರುವಂತೆ ಬಸ್ ನಿಲ್ದಾಣಗಳನ್ನು ಇನ್ನೂ ಹೆಚ್ಚಿನ ಕಡೆಗಳಲ್ಲಿ ಕಟ್ಟಲಿ. ಅಲ್ಲಿಂದ ನಗರದ ಎಲ್ಲಾ ಭಾಗಗಳಿಗೂ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಗೂ ನೇರ ಬಸ್ ಸೌಲಭ್ಯ ಒದಗಿಸಲಿ.

೩-೪ ಜನ ಒಂದೇ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಕಾರ್ ಪೂಲಿಂಗನ್ನು (Car pooling ) ಸಮರ್ಥವಾಗಿ ಬಳಸಲಿ. ೪ ಜನ, ೪ ಕಾರಿನಲ್ಲಿ ಹೋಗೋದು ಬಿಟ್ಟು, ಒಂದೇ ಕಾರಿನಲ್ಲಿ ಕಚೇರಿಗೆ ಹೋಗಿ ಬರಬಹುದು. ಒಂದೊಂದು ದಿನ ಒಬ್ಬೊಬ್ಬರ ಕಾರ್ ಉಪಯೋಗಿಸಬಹುದು. ಸಂಚಾರ ದಟ್ಟಣೆ ಕಡಿಮೆಯಾಗುತ್ತೆ, ಇಂಧನ ಉಳಿತಾಯವಾಗುತ್ತೆ, ಮಾಲಿನ್ಯದ ಪ್ರಮಾಣವೂ ಕಡಿಮೆಯಾಗುತ್ತೆ. ಹಾಗೇ ಒಬ್ಬರು ಕಾರ್ ಚಲಾಯಿಸುತ್ತಿದ್ದರೆ, ಉಳಿದವರು ಸಂಗೀತ ಕೇಳುವುದು, ಓದುವುದು ಹೀಗೆ ಬೇರೆ ಕೆಲಸ ಮಾಡಿಕೊಂಡು ಸಮಯದ ಸದುಪಯೋಗ ಮಾಡಿಕೊಳ್ಳಬಹುದು.

ಹೆಚ್ಚುತ್ತಿರುವ ವಾಹನಗಳಿಂದಾಗಿ ಬೆಂಗಳೂರು ಇನ್ನೊಂದು ಮುಂಬೈ ಆಗದಿರಲಿ. ನಮ್ಮ ಬೆಂಗಳೂರಿನಲ್ಲಿ ಸಂಚಾರದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಅಪಘಾತಗಳು ಕಡಿಮೆಯಾಗಲಿ ಎಂಬುದೇ ನನ್ನ ಆಶಯ. ರೋಗ ಬರೋಕೆ ಮುಂಚೆ ಅದು ಬಾರದಂತೆ ತಡೆಗಟ್ಟೋದು ಸುಲಭ ಹಾಗೂ ಒಳ್ಳೆಯದಲ್ವೇ ?

1 comment:

  1. ಉತ್ತಮ ವಿಚಾರ! ಬೆಂಗಳೂರು ಬಿಟ್ಟು ರಾಜ್ಯದ ಬೇರೆ ಪಟ್ಟಣಗಳ ಕಡೆಗೆ ಉದ್ಯಮ ಹಂಚಿ ಹೋದರೆ ಒಟ್ಟು ಬೆಳವಣಿಗೆ ಆದ ಹಾಗೇನೋ ಆಗುತ್ತೆ. ಇಲ್ಲವೆಂದಲ್ಲಿ ಅಭಿವೃದ್ದಿ ಕೇಂದ್ರೀಕೃತಗೊಂಡು ಉಸಿರು ಕಟ್ಟಿದಂತಾಗಬಹುದು!

    ReplyDelete