23 February 2009

ಹೆಸರಲ್ಲೇನಿದೆ ?

ಒಂದು ನಗೆ ಬರಹ ..........

ಹಿಂದೆ ಮಕ್ಕಳಿಗೆ ಹೆಸರಿಡುವಾಗ ದೇವರ ಹೆಸರು ಇಡುತ್ತಿದ್ದರು. ಯಾಕಂದ್ರೆ ಮಕ್ಕಳು ದೇವರ ಥರಾ ಒಳ್ಳೆಯವರಾಗಲಿ ಎಂದು ಅಥವಾ ಮಕ್ಕಳನ್ನು ಕರೆಯುವ ಸಲುವಾಗಿ ದೇವರನಾಮ ತಮ್ಮ ಬಾಯಲ್ಲಿ ಬರುತ್ತೆ ಅಂತ. (ಹಿಂದೆ ಯಮನ ದೂತರು ಬಂದು ಅಜಾಮಿಳನ ಕೊರಳಿಗೆ ಯಮಪಾಶ ಬಿಗಿದಾಗ, "ನಾರಾಯಣ" ಎಂಬ ತನ್ನ ಮಗನನ್ನು ಕರೆದಿದ್ದರಿಂದ ಅವನ ಪ್ರಾಣ ಉಳಿಯಿತಂತೆ.) ಕ್ರಮೇಣ ಈ ಅಭ್ಯಾಸ ಬದಲಾಯಿತು. ಪ್ರಸಿದ್ಧ ವ್ಯಕ್ತಿಗಳ, ಸಿನಿಮಾ ನಟ/ನಟಿಯರ, ಆಟಗಾರರ ಹೆಸರು ಇಡಲು ಆರಂಭಿಸಿದರು. ಈಗಿನವರು ಇನ್ನೂ ಮುಂದುವರಿದಿದ್ದಾರೆ. ಈಗ ಇರುವ ಹೆಸರುಗಳ ಬಗ್ಗೆ "ಅದೇನದು ಹಳೇ ಹೆಸರು ? ಓಬೀರಾಯನ ಕಾಲದ್ದು !!" ಎಂದು ಮೂಗು ಮುರಿಯುತ್ತಾರೆ. ಯಾರೂ ಇಡದ, ಎಲ್ಲಿಯೂ ಇಲ್ಲದ ಹೊಸ ಹೆಸರಿನ ತಲಾಶೆಯಲ್ಲಿದ್ದಾರೆ ಜನ. ಕೆಲವರು ಯಾವುದೋ ಪಾಶ್ಚಾತ್ಯರ ಹೆಸರು ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ಹಳೆಯ ಹೆಸರಿನ ಕೆಲವು ಅಕ್ಷರಗಳನ್ನು ನುಂಗಿ, ಸ್ವರಗಳನ್ನು ಸ್ಥಾನಪಲ್ಲಟಗೊಳಿಸಿ, ಎರಡು ಅರ್ಧ-ಅರ್ಧ ಹೆಸರುಗಳನ್ನು ಸೇರಿಸಿ ಹೊಸ "ಶಬ್ದ"ದ ಸಂಶೋಧನೆ ಮಾಡುತ್ತಾರೆ. ಆ "ಶಬ್ದ"ವನ್ನೇ ಮಗುವಿಗೆ "ಹೆಸರು" ಅಂತ ಇಡುತ್ತಾರೆ.

ಹಿಂದಿನ ಹೆಸರುಗಳಿಗೆ ಒಳ್ಳೆಯ ಅರ್ಥಗಳಿದ್ದವು. ನಾಮ ಅಂಕಿತವಾದರೂ ಅನ್ವರ್ಥವಾಗಲಿ ಎಂದು ಹೆತ್ತವರು ಹಾರೈಸುತ್ತಿದ್ದರು. ಆದರೆ ಈಗಿನವು ಇಟ್ಟವರಿಗೇ ಪ್ರೀತಿ. ಕೆಲವು ಸಂಶೋಧಿತ ಹೆಸರುಗಳು "ಒಳ್ಳೆಯ" ಋಣಾತ್ಮಕ ಅರ್ಥ ಹೊಂದಿವೆ. ಇನ್ನು ಕೆಲವಕ್ಕೆ ಭಾರತದ ಯಾವುದೇ ಭಾಷೆಯ ಅರ್ಥಕೋಶ ತೆರೆದು ನೋಡಿದರೂ ಅರ್ಥ ಸಿಗಲಿಕ್ಕಿಲ್ಲ. ಈ ಪದಗಳಿಗೆ ಹೊಸ ಅರ್ಥ ಕೊಟ್ಟು ಅರ್ಥಕೋಶಕ್ಕೆ ಸೇರಿಸಬೇಕು.

"ಬೆಳದಿಂಗಳ ಬಾಲೆ" ಕನ್ನಡ ಚಲನಚಿತ್ರದಲ್ಲಿ ನಾಯಕನ ಹೆಸರು "ರೇವಂತ್". ನಾಯಕಿ ಇದರ ಅರ್ಥದ ಬಗ್ಗೆ ಕೇಳಿದಾಗ ತುಂಬಾ ಕಷ್ಟಪಟ್ಟು ಕಂಡುಹಿಡಿಯುತ್ತಾನೆ - ರೇವಂತ್ ಅಂದ್ರೆ "ಸಮುದ್ರದ ದಂಡೆಯಲ್ಲಿ ಕುದುರೆ ತೊಳೆಯುವವ" ಎಂದು.

ಕೆಲವರು ಈಗಿರುವ ಹೆಸರು ದುರಾದೃಷ್ಟಕರ ಅಂತ, ಸಂಖ್ಯಾಶಾಸ್ತ್ರಜ್ಞರ ಜೇಬು ತುಂಬಿಸಿ ಹೆಸರುಗಳನ್ನು ಬದಲಾಯಿಸುತ್ತಾರೆ. ಹೆಸರಿನಲ್ಲಿ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸುತ್ತಾರೆ ಅಥವಾ ಬದಲಾಯಿಸುತ್ತಾರೆ. ಹೀಗೆ ಹೆಸರುಗಳನ್ನು ಬದಲಾಯಿಸುವ ಹಿಂದಿ ಚಲನಚಿತ್ರ ನಟ/ನಟಿಯರ ಬಗ್ಗೆ ಕಳೆದ ವರ್ಷ ಟಿವಿಯಲ್ಲಿ ಪ್ರಸಾರವಾದ ಒಂದು ಕಾರ್ಯಕ್ರಮವನ್ನು ನಾನು ನೋಡಿದ್ದೆ.

ತಪ್ಪು ಅಂತ ಹೇಳ್ತಾ ಇಲ್ಲ, ಆದ್ರೆ ನಾನು ಕೇಳಿದ ಕೆಲವು ಹೆಸರುಗಳು ಹೀಗಿವೆ:

ಪ್ರಮಾದ್ : ಅಂದರೆ "ತಪ್ಪು" (ಬಹುಶಃ ಇದು ಪ್ರಮೋದ್ ನ ರೂಪಾಂತರ). ಈತ ಯಾವಾಗ್ಲೂ ತಪ್ಪು ಮಾಡ್ತಿರ್ತಾನೆ ಅಂತನಾ ? ಇನ್ನೇನೋ ಗೊತ್ತಿಲ್ಲ.

ಅಂಜೇಶ್ : ಇದು ಅಂಜನಾ+ರಾಜೇಶ್ ಇರಬಹುದು. ತುಂಬಾ ಧೈರ್ಯ ಇರುವವನಿಗೆ ಧೀರಜ್ ಅಂತಾರೆ. ಈತ ತುಂಬಾ ಹೆದರು ಪುಕ್ಕಲ.

ಮಗಧ್ : ಹಿಂದೆ ಈ ಹೆಸರಿನ ದೇಶ ಇತ್ತಂತೆ. ಪರ್ವಾಗಿಲ್ಲ ಭರತ್, ಭಾರತಿ ಎಂಬ ಹೆಸರುಗಳಿವೆ.

ಚಾರ್ಮೇಶ್ : ಒಂದು ಕಾರ್ ಮೇಲೆ ಈ ಹೆಸರು ನೋಡಿದೆ. ಏನು ಅಂತ ಅರ್ಥ ಆಗ್ಲಿಲ್ಲ.

ಇನ್ನೂ ತುಂಬಾ ಕೇಳಿದ್ದೀನಿ. ನೆನಪಿಗೆ ಬರುತ್ತಿಲ್ಲ. ನಿಮಗೆ ಇಂಥಾ ಹೆಸರುಗಳು ಗೊತ್ತಿದ್ದರೆ ಕಳಿಸಿ.

ನಾನೂ ಕೆಲವೊಂದು ಹೊಸ ಹೆಸರುಗಳನ್ನು ಸಂಶೋಧಿಸಬಲ್ಲೆ....
ಕರ್ಕೇಶ್, ಪೋಂಕ್ರೇಶ್, ಅಂತೇಶ್, ರಮಿತಾಭ್, ಕಾಮಂತ್, ಚಿರಂತ್, ಸುವಂತ್, ಅಜಿತೇಶ್, ಅಜಿಷೇಕ್, ಅನುಜಿತ್, ಅನುಚಿತ್, ಕಜಯ್, ಬೃಜಯ್, ಬಜ್ಜಯ್, ಕೃತಿಕ್, ತಿಕ್ಕೇಶ್, ತಿಕ್ಲೇಶ್, ಮಟಾಶ್ (?), ಮಾಗೇಶ್, ಗಣಿಕಾಂತ್, ಗಣಿವಂತ್, ಪ್ರೀತಿಕಾ, ಕವಿಕಾ, ಜತಿಕಾ, ಮತ್ತಿಖಾ, ಭೋಂಪ್ಳೊ, ಮಿಲಿನಿ, ಲಾಲಿನಿ, ಕಾಳಿನಿ, ಕಾಳೇಂದ್ರಿ ....... ಹೀಗೆ.

ಚೆನ್ನಾಗಿದೆ ಅಂತ ಅನಿಸಿದ್ರೆ ಹೆಕ್ಕಿಕೊಳ್ಳಿ.

ಆದ್ರೂ ............. ಹೆಸರಲ್ಲೇನಿದೆ ? ಅಲ್ವೇ ?

03 February 2009

ಇಹ ಲೋಕ ಯಾತ್ರೆ ಮುಗಿಸಿದ ಯಕ್ಷರಂಗದ ಸಾರ್ವಭೌಮ ಕೆರೆಮನೆ ಶಂಭುಹೆಗಡೆ

ಕೆರೆಮನೆ ಶಂಭು ಹೆಗಡೆ

ಬಡಗುತಿಟ್ಟಿನ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಶಂಭು ಹೆಗಡೆ ಇನ್ನಿಲ್ಲ. ತಂದೆ ಶಿವರಾಮ ಹೆಗಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಇವರು ಯಕ್ಷಗಾನದಲ್ಲಿ ಅಪರಿಮಿತವಾದುದನ್ನು ಸಾಧಿಸಿ ಮೇರುಶಿಖರವನ್ನೇರಿದರು. ಇವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಯಾವುದೇ ಸಾಧಕರು ತಮ್ಮ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗಲೇ ಕೊನೆಯುಸಿರೆಳೆಯಲು ಇಚ್ಛಿಸುತ್ತಾರೆ. ಈ ವಿಷಯದಲ್ಲಿ ಶಂಭು ಹೆಗಡೆಯವರು ಭಾಗ್ಯಶಾಲಿಗಳು. ಯಾವುದೋ ಒಂದು ಸರಕಾರಿ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿ, ೨೦-೩೦ ವರ್ಷ ಮನೆಯಲ್ಲಿ ದಿನವೆಣಿಸುತ್ತಿರುವ ಯಾರಾದರೂ ಸತ್ತರೆ, "ಇವರ ಮರಣದಿಂದ, ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟ !!! " ಎನ್ನುತ್ತಾರೆ. ಆದರೆ ಕೊನೆಯವರೆಗೂ ಕಾರ್ಯಪ್ರವೃತ್ತರಾಗಿದ್ದ ಹೆಗಡೆಯವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ. ಇದ್ದಿದ್ದರೆ ಇನ್ನಷ್ಟು ಸಾಧಿಸುತ್ತಿದ್ದರು. ಇವರ ಮಕ್ಕಳು, ಮೊಮ್ಮಕ್ಕಳ ಮೇಲೆ ಕೆರೆಮನೆ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇದೆ.


ಈ ಹಿರಿಯರ ಆತ್ಮಕ್ಕೆ ಇಡಗುಂಜಿ ಮಹಾಗಣಪತಿ ಶಾಂತಿಯನ್ನು ದೊರಕಿಸಿ ಕೊಡಲಿ.



ಹೆಚ್ಚಿನ ಮಾಹಿತಿಗಾಗಿ ಓದಿ:
ಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ

ಕವಿದುಬಿದ್ದರು ಶಂಭುಹೆಗಡೆ ಹರಿಯ ಚರಣದಲಿ

Keremane Shambhu Hegde



02 February 2009

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?

"Slumdog Millionaire" ನಲ್ಲಿ ತೋರಿಸಿರುವುದು ಭಾರತದ ನೈಜ ಚಿತ್ರಣವೇ ?
ಆಥವಾ ಕೇವಲ ಭಾರತದ ಬಡತನ ಹಾಗೂ ಕೊಳೆಗೇರಿಗಳನ್ನು ತೋರಿಸಿ ವಿದೇಶದ ನಿರ್ದೇಶಕ/ನಿರ್ಮಾಪಕರು ದುಡ್ಡು ಮಾಡುತ್ತಿದ್ದಾರೆಯೇ ? ಅಮೇರಿಕಾದಲ್ಲಿ ಬಡವರಿಲ್ಲವೇ ? ಕೊಳೆಗೇರಿಗಳಿಲ್ಲವೇ ? ಭ್ರಷ್ಟಾಚಾರವಿಲ್ಲವೇ ? ನಿರ್ಜನ ಪ್ರದೇಶದಲ್ಲಿ ಹೋಗುತ್ತಿರುವವರನ್ನು ನಿಲ್ಲಿಸಿ, ಗನ್ ತೋರಿಸಿ ದುಡ್ಡು ಕೀಳುವವರಿಲ್ಲವೇ ? ದುಡ್ಡು ಕೊಡಲು ನಿರಾಕರಿಸಿದಾಗ ಕೊಲ್ಲುವುದಿಲ್ಲವೇ ? ಕೆಲಸಕ್ಕೆ ಅಥವಾ ಉನ್ನತ ವ್ಯಾಸಂಗಕ್ಕೆಂದು ಭಾರತದಿಂದ ಅಲ್ಲಿಗೆ ಹೋದವರು ಮೃತರಾಗಿಲ್ಲವೇ ? ಆದರೆ ನಾನು ನೋಡಿರುವ ಇಂಗ್ಲಿಷ್ ಚಿತ್ರಗಳಲ್ಲಿ ಕೇವಲ ಐಷಾರಾಮಿ ಮನೆ/ಆಫೀಸು/ಕಟ್ಟಡ/ವಿಮಾನ/ಹಡಗುಗಳನ್ನೇ ತೋರಿಸಿದ್ದಾರೆ. ವಿದೇಶೀಯರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಒಂದೆರಡು ಪ್ರಶಸ್ತಿಗಳು ಬಂದಾಗ ಇಲ್ಲಿನ ಕೆಲ ನಟರು ಕೊಂಬು ಬಂದವರ ಥರ ಏಕೆ ಆಡುತ್ತಾರೆ ? ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಈ ಚಿತ್ರ ಮಾಡಿದ್ದರೆ ಇಲ್ಲಿ ಹಾಗೂ ವಿದೇಶಗಳಲ್ಲಿ ಇಷ್ಟು ಸುದ್ದಿಯಾಗುತಿತ್ತೆ ? ಇಲ್ಲಿನ ೧-೨ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದೇ ವಾರಕ್ಕೆ ನಾಪತ್ತೆಯಾಗುತಿತ್ತು.

ವೆಬ್ ದುನಿಯಾದಲ್ಲಿ ಬಂದ ಬರಹ

ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ಬರಹ

ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ

ಇದು ಯಾವುದಾದರೂ ಭಾರತೀಯ ಭಾಷೆಯಲ್ಲಿ ಮಾಡಿದ್ದರೆ ಅಥವಾ ಯಾರಾದರೂ ಭಾರತದ ನಿರ್ದೇಶಕ/ನಿರ್ಮಾಪಕರು ಇಂಗ್ಲಿಷ್ ನಲ್ಲಿ ಮಾಡಿದ್ದರೆ Oscar ಬರುತ್ತಿತ್ತೇ ? ನಿಮ್ಮ ಅನಿಸಿಕೆ ಹೇಳಿ.